
`ಇನ್ನೂ ಅನಿಸುತಿದೆ'....
ಹರೀಶ್ ಕೆ.ಆದೂರು
ಮಂಗಳೂರು, ಡಿ.21: ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದರೂ ಮುಂಗಾರು ಮಳೆ ಚಲನ ಚಿತ್ರದ ನಂತರ ಏಕಾಏಕಿಯಾಗಿ ಎತ್ತರಕ್ಕೇರಿ ಮನೆ ಮಾತಾದ ಸರಳ ವ್ಯಕ್ತಿತ್ವದ ಸಾಹಿತಿ ಜಯಂತ ಕಾಯ್ಕಿಣಿ ಇದೀಗ ಕೊಂಚ ಬಿಡುವು ಮಾಡಿಕೊಂಡಿದ್ದಾರೆ.
ಮುಂಗಾರು ಮಳೆ ಸಿನೆಮಾ `ಗಣೇಶನ ' ಸಿನೆಮಾ ಎಂದು ಎಷ್ಟು ಖ್ಯಾತಿ ಪಡೆಯಿತೋ ಅದಕ್ಕಿಂತ ಒಂದು ಪಟ್ಟು ಹೆಚ್ಚು ಖ್ಯಾತಿ ಪಡೆದದ್ದು ಕಾಯ್ಕಿಣಿಯ ಸಾಹಿತ್ಯದ ಮೂಲಕ ಅವರ ಹಾಡುಗಳ ಮೂಲಕ ಎಂಬುದು ನಿತ್ಯ ಸತ್ಯ.
ಮುಂಗಾರು ಮಳೆ ಸಿನೆಮಾದ ನಂತರ 150 ಹಾಡುಗಳನ್ನು ಈ ಸಾಹಿತಿ ವಿವಿಧ ಚಿತ್ರಗಳಿಗಾಗಿ ಎಡೆಬಿಡದೆ ಬರೆದಿದ್ದಾರೆ. ಬಿರುಗಾಳಿ, ಜೊತೆಗಾರ, ಜಂಗಲಿ, ಮಚ್ಚ, ಸಿಹಿಮುತ್ತು , ಹಾಗೆ ಸುಮ್ಮನೆ ಈ ಎಲ್ಲಾ ಸಿನೆಮಾಗಳಲ್ಲೂ ಕಾಯ್ಕಿಣಿ ರಚನೆಯ ಹಾಡುಗಳೇ ಕೇಳಿಬರುತ್ತಿವೆ. 40ಕ್ಕೂ ಹೆಚ್ಚು ಹಾಡುಗಳು ವಿವಿಧ ಸಿನೆಮಾಗಳಲ್ಲಿ ಮೂಡಿಬಂದು ಜನಮನ ಗೆದ್ದವು. ಇನ್ನು ಕೆಲವು ಹಾಡುಗಳು ಸಿನೆಮಾಗಳಿಗಾಗಿ ರಚನೆಯಾಗಿ ಕೂತಿವೆಯಂತೆ. 30ರಷ್ಟು ಹಾಡುಗಳು ಹಾಗೇ ಇವೆ. ಒಳ್ಳೆಯ ಸಿನೆಮಾಗಳು ಯಾವುದಾದರೂ ಬಂದರೆ ಅವುಗಳಿಗೆ ನೀಡುತ್ತೇನೆ ಎನ್ನುತ್ತಾರೆ ಕಾಯ್ಕಿಣಿ.
ಅಂದಹಾಗೆ ಅವರು ಮಾತಿಗೆ ಸಿಕ್ಕಿದ್ದೇ ಒಂದು ಅವಿಸ್ಮರಣೀಯ ಸಂದರ್ಭ. ಮಂಗಳೂರಿನಲ್ಲಿರುವ ನನ್ನ ಪುಟ್ಟ ಬಾಡಿಗೆ ಮನೆಗೆ ಜಯಂತ ಕಾಯ್ಕಿಣಿ ರವಿವಾರ ಭೇಟಿ ನೀಡಿ ಒಂದಷ್ಟು ಹೊತ್ತು ಆರಾಮವಾಗಿ ಕಾಲ ಕಳೆದರು. ಹಳೆಯ ಸಿಹಿ, ಕಹಿ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ನಮ್ಮೆಲ್ಲರನ್ನು ಬಿಟ್ಟು ಹೋದ ಹಿರಿಯ ಸಾಹಿತಿ ಎಂ.ವ್ಯಾಸರ ನೆನಪುಗಳನ್ನು ಮೆಲುಕುಹಾಕಿದರು. ಅವರಿದ್ದಾಗಲೇ ಅವರ ಒಂದಷ್ಟು ಬರಹಗಳು ಕೃತಿರೂಪದಲ್ಲಿ ಬರಬೇಕಿತ್ತು ಎಂಬ ಮಾತುಗಳು ಅವರ ಬಾಯಿಂದ ಬಂದವು.
ಪುಟ್ಟ ಮನೆಯ ಮುಂದಿರುವ ತುಳಸಿಕಟ್ಟೆ, ಬಾಳೆಗಿಡ, ಅಡಿಕೆಮರ, ನೀರು ತುಂಬಿದ ಗದ್ದೆ,ತೆಂಗು, ಮಾವಿನ ಮರಗಳು ಇದನ್ನೆಲ್ಲಾ ನೋಡಿದ ಜಯಂತ ಕಾಯ್ಕಿಣಿಯವರು `ನನಗೆ ಊರಿಗೆ ಹೋದ ನೆನಪಾಗುತ್ತಿದೆ ...ಒಳ್ಳೆ ಜಾಗ...'ಎನ್ನುತ್ತಾ ಒಂದಷ್ಟು ಹೊತ್ತು ಆರಾಮವಾಗಿ ಕುಳಿತು ಮಾತಿಗಿಳಿದರು.
ಅದೇ ಮುಗ್ಧವಾದ ಮನಸ್ಸಿನಿಂದನ, ಮುಕ್ತವಾಗಿ ಮಾತನಾಡಿದರು.
ಪ್ರೇಮಿಗಳ ದಿನಕ್ಕಾಗಿ... : ಮನೋಮೂತರ್ಿ , ಸೋನು ನಿಗಮ್, ಜಯಂತ ಕಾಯ್ಕಿಣಿ ಸೇರಿಕೊಂಡು ಯುವ ಪ್ರೇಮಿಗಳಿಗಾಗಿಯೋ ಎಂಬಂತೆ ಪ್ರೇಮಿಗಳ ದಿನಕ್ಕೊಂದು ಸ್ಪಷೆಲ್ ಗಿಫ್ಟ್ ರೆಡೀ ಮಾಡ್ತಿದ್ದಾರೆ. ಹೊಸ ಪ್ರೀತಿ, ಪ್ರೇಮದ ಗೀತೆಗಳ ಗುಚ್ಛವದು. 9 ಹಾಡುಗಳನ್ನೊಳಗೊಂಡ `ಇನ್ನೂ ಅನಿಸುತಿದೆ' ಎಂಬ ಹಾಡುಗಳ ಸಂಗ್ರಹ ಇದೀಗ ವೆಲೆಂಟೈನ್ಸ್ ಡೇಗಾಗಿ ತಯಾರಾಗುತ್ತಿದೆ.
ಹಾಗೇ ಸುಮ್ಮನೆ: ಮನೋಮೂತರ್ಿ ಹಾಗೂ ಜಯಂತ ಅವರ ಗೆಳೆತನಕ್ಕೆ ಸಾಕ್ಷಿಯಾಗಿ ಹಾಗೇ ಸುಮ್ಮನೆ ಚಿತ್ರ ಇದೀಗ ಸಿದ್ಧವಾಗುತ್ತಿದೆ. ಚಿತ್ರದಲ್ಲಿರುವ ಆರೂ ಹಾಡುಗಳು ಕಾಯ್ಕಿಣಿಯವರ ಲೇಖನಿಯಿಂದ ಮೂಡಿಬಂದವುಗಳು. ಈ ಹಾಡುಗಳು ಹೊಸ ಅನುಭವವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಕಾಯ್ಕಿಣಿ.



